ಕ್ಯಾಪ್ಟನ್ ಸೌರಬ್ ಕಾಲಿಯಾ : ಕಾರ್ಗಿಲ್ ಯುದ್ಧದ ಪ್ರಾರಂಭವಾಗೋ ಮೊದಲೇ ಭಾರತ ಮಾತೆಯ ಪಾದಗಳಿಗೆ ತನ್ನ ಪ್ರಾಣವನ್ನು ಅರ್ಪಿಸಿದ ವೀರ ಸೇನಾನಿ ಕ್ಯಾಪ್ಟನ್ ಸೌರಬ್ ಕಾಲಿಯಾ.
ಭಾರತ ಎದುರಿಸಿದ ಯುದ್ದಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಕಾದಾಡಿದ ಕಾರ್ಗಿಲ್ ಯುದ್ದವೇ ದೊಡ್ಡ ಯುದ್ದವೆನ್ನಬಹುದು. ನಮ್ಮ ಸೈನಿಕರ ಕೆಚ್ಚೆದೆಯ ಹೋರಾಟ, ಸಾಹಸಗಳಿಂದ ಭಾರತ ಈ ಯುದ್ದದಲ್ಲಿ ಜಯಭೇರಿ ಬಾರಿಸಿತು. ನಿಯಮಗಳನ್ನು ಗಾಳಿಗೆ ತೂರಿ 1999ರಲ್ಲಿ ಪಾಪಿ ಪಾಕಿಸ್ತಾನ ನಮ್ಮ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತೀಯ ನೆಲೆಗಳಿಗೆ ತನ್ನ ಸೈನ್ಯ ಮತ್ತು ಕಾಶ್ಮೀರಿ ಉಗ್ರರನ್ನು ನುಸುಳಿಸಿತು. ಇದೇ ಯುದ್ದದ ಕಾರಣ. ಕಾಶ್ಮೀರಿ ಉಗ್ರಗಾಮಿಗಳು ಮತ್ತು ಪಾಕ್ ಸೈನಿಕರು ನಮ್ಮ ಹಲವು ಭಾರತೀಯ ನೆಲೆಗಳನ್ನು ಆಕ್ರಮಿಸಿಕೊಂಡರು. ಈ ನೆಲೆಗಳನ್ನು ಮರುವಶ ಪಡೆದು ಕೊಳ್ಳಲು ಕಾರ್ಗಿಲ್ ಜಿಲ್ಲೆ ಮತ್ತು ಗಡಿ ಪ್ರದೇಶಗಳಲ್ಲಿ 1999ರ ಮೇ ಮತ್ತು ಜುಲೈ ನಡುವೆ ನಡೆದ ರೋಚಕ ಯುದ್ದವೇ ಕಾರ್ಗಿಲ್ ಯುದ್ದ.
ಕ್ಯಾಪ್ಟನ್ ಸೌರಬ್ ಕಾಲಿಯಾ ಹಾಗೂ ಅವರ ಪ್ರೀತಿಯ ತಾಯಿ |
ಪಾಕಿಸ್ತಾನದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳಲು 1998ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನದ ನವಾಜ಼್ ಷರೀಫ್ ಎದುರು ಕುಳಿತು ಕೈಕುಲುಕಿದರು. ನಾವು ಪಾಕಿಸ್ತಾನಕ್ಕೆ ರೈಲು ಬಿಟ್ಟದ್ದಾಯಿತು. ಬಸ್ಸೂ ಓಡಿಸಿದ್ದಾಯಿತು, ಕೈಕುಲುಕಿದ್ದೂ ಆಯಿತು. ಆದರೆ ಪಾಕಿಸ್ತಾನ ಮಾತ್ರ ಬದಲಾಗಲಿಲ್ಲ. ತನ್ನ ನರಿಬುದ್ಧಿಯನ್ನು ಪ್ರದರ್ಶಿಸುವುದಕ್ಕೆ ಪಾಕಿಸ್ತಾನ ತಡ ಮಾಡಲೇ ಇಲ್ಲ.
ಜೋಜಿ ಲಾ ಪಾಸ್, ಅತ್ಯಂತ ಕಡಿದಾದ, ಅಷ್ಟೇ ಕಠಿಣವಾದ ಕೊರಕಲುಗಳು ದಾರಿಯುದ್ದಕ್ಕೂ. ಸ್ವಲ್ಪ ಎಡವಿದರೂ ಪ್ರಪಾತವೇ ಗತಿ. ಇನ್ನು ಮಂಜು ಸುರಿಯುವಾಗಲಂತೂ ಆ ದಾರಿಯಲ್ಲಿ ವಾಹನಗಳಿರಲಿ, ನಡೆದುಕೊಂಡು ಹೋಗುವುದೂ ಕಷ್ಟ. ಮೇ ತಿಂಗಳ ಕೊನೆಯವರೆಗೆ ಮಂಜು ಬೆಟ್ಟ ಪೂರ್ತಿ ಆವರಿಸಿಕೊಂಡಿರುತ್ತದೆ. ಹೀಗಾಗಿ ಆ ವೇಳೆಯಲ್ಲಿ ಸೈನಿಕರೂ ಇರುವುದಿಲ್ಲ. ಅವರಿಗೆ ಬೇಕಾದ ವಸ್ತುಗಳನ್ನು ತಲುಪಿಸುವುದಕ್ಕೂ ಆಗೋದಿಲ್ಲ. ಈ ವಿಚಾರವನ್ನು ಚೆನ್ನಾಗಿ ಅರಿತ ಸೇನಾ ನಾಯಕ ಪರ್ವೇಜ್ ಮುಷರ್ರಫ್ ಏಪ್ರಿಲ್ ಆರಂಭದಲ್ಲೇ ತನ್ನ ಸೈನಿಕರಿಗೆ ಆದೇಶ ನೀಡತೊಡಗಿದ.
ಕಾರ್ಗಿಲ್ ನಲ್ಲಿ ಅತಿ ಹಿಮ ಬೀಳುತ್ತಿದ್ದಂತೆ ಭಾರತೀಯ ಸೇನೆ ಹಿಂದೆ ಬರುತ್ತದೆ. ನಂತರ ಹಿಮ ಕರಗುತ್ತಲೇ ಮತ್ತೆ ಅಲ್ಲಿಗೆ ಹೋಗುತ್ತದೆ. ಇದು ಹಿಂದೆಯಿಂದ ನಡೆದು ಬಂದಿರುವಂಥ ಪದ್ದತಿಯಾಗಿತ್ತು.
ಮಂಜು ಕರಗುವುದನ್ನೆ ಕಾಯುತ್ತಿದ್ದ ಪಾಕಿಗಳು ಏಪ್ರಿಲ್ ಕೊನೆಕೊನೆಯಲ್ಲಿ ಕಾರ್ಗಿಲ್ನ, ಪೂರ್ವ ಬಟಾಲಿಕ್ನ ಮತ್ತು ದ್ರಾಸ್ನ ಉತ್ತರ ದಿಕ್ಕಿನ ಬೆಟ್ಟಗಳನ್ನು ಏರತೊಡಗಿದರು. ಗಟ್ಟಿಮುಟ್ಟಾದ ಬಂಕರ್ಗಳನ್ನು ಕಟ್ಟಿಕೊಂಡರು. ಮೇ ಆರಂಭದ ವೇಳೆಗೆ ಅವರ ತಯಾರಿ ಸಂಪೂರ್ಣಗೊಂಡಿತ್ತು. ಮೇ ಕೊನೆಯವರೆಗೂ ಮಂಜು ಕರಗದು, ಜೋಜಿ ಲಾ ತೆರೆದುಕೊಳ್ಳದು ಅಂದುಕೊಂಡಿದ್ದ ಪಾಕಿಗಳ ಲೆಕ್ಕಾಚಾರ ತಲೆಕೆಳಗಾಯಿತು. ಆ ವರ್ಷ ಮೇ ಆರಂಭದಲ್ಲಿಯೇ ಮಂಜು ಕರಗಿ ಜೋಜಿ ಲಾ ತೆರೆದುಕೊಂಡಿತ್ತು.
ಪಾಕ್ ಸೇನೆ ಬೆಟ್ಟದ ಮೇಲಿರುವ ಸುದ್ದಿ ದನಗಾಹಿಗಳ ಮೂಲಕ ಭಾರತೀಯ ಸೇನೆಗೆ ವಿಷಯ ತಲುಪಿತ್ತು. ವರದಿ ತರಲೆಂದು ಸೌರಭ್ ಕಾಲಿಯಾ ನೇತೃತ್ವದಲ್ಲಿ ಐವರನ್ನು ಗುಡ್ಡ ಹತ್ತಿಸಿತು.
ಕಾರ್ಗಿಲ್ ನ ಆ ಪರ್ವತಗಳಲ್ಲಿ ಸುಮಾರು 20-25 ನುಸುಳುಕೋರರು ಬಜರಂಗ್ ಪೋಸ್ ನಲ್ಲಿ ಬಂದು ಕೂತಿದ್ದಾರೆಂಬ ಮಾಹಿತಿ ಇತ್ತು. ಈ ಮಾಹಿತಿಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಹಾಗು ನುಸುಳುಕೋರರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮೇ 15 ರಂದು ಕ್ಯಾಪ್ಟನ್ ಸೌರಬ್ ಕಾಲಿಯಾ ಮತ್ತು 5 ಜನ ಸಂಗಡಿರೊಂದಿಗೆ ಕಸ್ಕರ್ ಭಾಗದಲ್ಲಿದ್ದ ಬಜರಂಗ್ ಪೋಸ್ ಕಡೆಗೆ ಹೊರಟ.
ದಟ್ಟವಾದ ಕಾಡು, ಮೈಕೊರೆಯುವ ಛಳಿ, ಅಘಾದವಾದ ಹಿಮಪಾತವನ್ನು ಲೆಕ್ಕಿಸದೇ ಸೌರಬ್ ಮುನ್ನಡೆದ. ಬಜರಂಗ್ ಪೋಸ್ಟ್ ಹತ್ತಿರ ಹೋಗುತ್ತಿದ್ದಂತೆ ಸೌರಬ್ ಮತ್ತು ಅವನ ತಂಡದ ಮೇಲೆ ನೂರಾರು ಜನ ಪಾಪಿ ಪಾಕಿಸ್ತಾನಿಯರು ಗುಂಡಿನ ಮಳೆ ಸುರಿಸಲಿ ಶುರು ಮಾಡಿದರು. ಸೌರಬ್ ಮತ್ತು ಅವನ ಸಂಗಡಿಗರು ಕೆಚ್ಚೆದೆಇಂದ ಹೋರಾಡುತ್ತಿದ್ದರು. ಪಾಕಿಯರ ಗುಂಡಿನ ಮಳೆ ನಿಲ್ಲಲೇ ಇಲ್ಲ. ತಮ್ಮ ಬಳಿ ಇದ್ದ ಮದ್ದು-ಗುಂಡುಗಳು ಖಾಲಿಯಾಗುತ್ತಿರುವುದನ್ನು ಅರಿತ ಸೌರಬ್ ಅಲ್ಲಿಂದ ತಪ್ಪಿಸಿಕೊಂಡು ವಾಪಸ್ ಬರಲು ಪ್ರಯತ್ನಿಸಿದ.
ಆದರೆ ದುರದೃಷ್ಟವಷಾತ್ ಪಾಕಿಯರು ಈ 5 ಜನರನ್ನು ಸುತ್ತುವರೆದು ಬಂಧಿಸಿದರು. ಇಲ್ಲಿಂದ ಮುಂದಿನ ಕಥೆ ದಾರುಣವಾದದ್ದು. ಈ ಐದು ಜನರನ್ನು ಪಾಕಿಯರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕರೆದೊಯ್ದು ಸುಮಾರು 25 ದಿನಗಳ ಕಾಲ ಅವರಿಗೆ ಚಿತ್ರಹಿಂಸೆ ಕೊಟ್ಟು ಕೊನೆಯಲ್ಲಿ ಗುಂಡಿಟ್ಟು ಕೊಂದರು. ಜೂನ್ 9 ರಂದು ಪಾಪಿಸ್ತಾನ ಸೌರಬ್ನ ದೇಹವನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿತು.
ದೆಹಲಿಯಲ್ಲಿ ಅವನ ದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಿದ ವೈದ್ಯರು ದಂಗುಬಡಿದರು. ಆ ಪರಿಯ ಚಿತ್ರಹಿಂಸೆಯ್ನು ಅವರು ಎಂದೂ ನೋಡಿರಲಿಲ್ಲ. ದೇಹವನ್ನು ಸಿಗರೇಟ್ ಇಟ್ಟು ಸುಟ್ಟಿದ್ದರು. ಕಬ್ಬಿಣದ ಕಂಬಿಗಳನ್ನು ಕಾಯಿಸಿ ಕಣ್ಣುಗುಡ್ಡೆಗಳನ್ನು ಅದರಲ್ಲಿ ಸುಟ್ಟು ಕಿತ್ತು ಹಾಕಿದ್ದರು. ಬೆರಳುಗಳನ್ನು ತುಂಡು ತುಂಡಾಗಿ ಕತ್ತರಿಸಿದ್ದರು. ಚಾಕುವಿನಿಂದ ಚರ್ಮ ಸುಲಿದಿದ್ದರು. ಪ್ರಾಣಿಗಳನ್ನು ಬಿಟ್ಟು ಕಚ್ಚಿಸಿದರು.ಮರ್ಮಾಂಗವನ್ನು ಕತ್ತರಿಸಿ ಬಿಸಾಡಿದರು. ಈ ಎಲ್ಲ ಚಿತ್ರಹಿಂಸೆಯನ್ನು ಕೊಟ್ಟು ಕೊನೆಗೆ ಗೊಂಡಿಟ್ಟುಕೊಂದರು.
ಕಾರ್ಗಿಲ್ ಉಳಿಸಿಕೊಳ್ಳುವುದಕ್ಕಾಗಿ ಅಂದು 527ಸೈನಿಕರು ತಮ್ಮ ಜೀವವನ್ನೇ ಬಲಿ ಕೊಟ್ಟರು. 1363ಸೈನಿಕರು ಊನಗೊಂಡರು, ಅಂಗಾಂಗ ಕಳೆದುಕೊಂಡರು. ಮೇಜರ್ ಪದ್ಮಪಾಣಿ ಆಚಾರ್ಯ ತೀರಿಕೊಂಡಾಗ ಅವರ ಪತ್ನಿಯ ಹೊಟ್ಟೆಯಲ್ಲಿ ಚೊಚ್ಚಲ ಮಗು ಬೆಳೆಯುತ್ತಿತ್ತು, ಕ್ಯಾಪ್ಟನ್ ವಿಕ್ರಂ ಬಾತ್ರಾ ಮಡಿದಾಗ ಅವರ ಭಾವಿ ಪತ್ನಿ ವಿವಾಹಕ್ಕೆ ತಯಾರಿ ನಡೆಸುತ್ತಿದ್ದಳು, ಲೆಫ್ಟಿನೆಂಟ್ ಹನೀಫುದ್ದೀನ್ ಹುತಾತ್ಮನಾಗುವುದರೊಂದಿಗೆ ಆತನ ವಿಧವೆ ತಾಯಿ ಇದ್ದ ಒಬ್ಬ ಮಗನನ್ನೂ ಕಳೆದುಕೊಂಡಳು,ಕ್ಯಾಪ್ಟನ್ ಕೆ. ಕ್ಲಿಫೋರ್ಡ್ ನೊಂಗ್ರುಮ್ ಮಡಿದಾಗ ಒಂದಿಡೀ ಮೇಘಾಲಯ ರಾಜ್ಯವೇ ಕಣ್ಣೀರ ಕಡಲಾಗಿತ್ತು.ದೇಶಕ್ಕಾಗಿ ತಮ್ಮೆಲ್ಲ ಸುಖ ಸಂತೋಷಗಳನ್ನು ಬದಿಗಿಟ್ಟು ಸೇವೆಗೈಯುವ ವೀರರನ್ನು, ದೇಶಕ್ಕಾಗಿ ಮಡಿದ ಹುತಾತ್ಮರನ್ನು ಸ್ಮರಿಸುವುದೇ ನಾವು ಅವರಿಗೆ ಸಲ್ಲಿಸಬಲ್ಲ ಕೃತಜ್ಞತೆ.ದೇಶ ಕಾಯುವ ವೀರ ಯೋಧರ ಕುರಿತು ಒಮ್ಮೆಯಾದರೂ ಚಿಂತಿಸುವ ಪ್ರಯತ್ನ ಮಾಡೋಣ. ಈ ದೇಶ ನಮ್ಮದು, ಅದನ್ನು ಪ್ರೀತಿಸೋಣ.
ಜುಲೈ 26-ಕಾರ್ಗಿಲ್ ವಿಜಯ ದಿನ. ಇಡೀ ಭಾರತವನ್ನೇ ಭಾವನಾತ್ಮಕವಾಗಿ ಒಂದು ಮಾಡಿದ ಆ ಕದನ.
#ವೀರಜವಾನ್_ಅಮರ್_ರಹೇ
#ಜೈ_ಜವಾನ್
#ಜೈ_ಜವಾನ್
-By Mahesh Hiremath
Post a Comment