Veerakesari 09:51
loading...
ಮಾಸ್ಟರ್ ದಾ ಸೂರ್ಯ ಸೇನ :
ಬಿಎ ವಿದ್ಯಾರ್ಥಿಯಾಗಿದ್ದಾಗ ಭಾರತ ಸ್ವಾತಂತ್ರ್ಯ ಸಮರದ ಕುರಿತು ಅರಿತ ಸೇನ್ ಕ್ರಾಂತಿಕಾರಿ ಸಂಘಟನೆ ಅನುಶೀಲನ ಸಮಿತಿ ಯೆಡೆಗೆ ಆಕರ್ಷಿತರಾದರು. 1918 ರಲ್ಲಿ ಚಿತ್ತಗಾಂಗ್ ನಲ್ಲಿ ಶಿಕ್ಷಕ ನಾಗಿ ವೃತ್ತಿ ಆರಂಭಿಸಿದ ಸೇನ್ ಆರಂಭದಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯ ಭಾಗವಾಗಿದ್ದರು. ಆದರೆ ಅದು ಮಧ್ಯದಲ್ಲೇ ಸ್ಥಗಿತವಾದಾಗ ಬೇಸರಗೊಂಡ ಸೇನ್ ಭಾರತದ ಸ್ವಾತಂತ್ರ್ಯಕ್ಕೆ ಕ್ರಾಂತಿಮಾರ್ಗವೇ ಸರಿ ಎಂದು ನಿಶ್ಚಯಿಸಿದರು.ಕ್ರಾಂತಿಕಾರಿ ಸಂಘಟನೆ ಯುಗಾಂತರದ ಕಾರ್ಯಕರ್ತನಾಗಿ ಕ್ರಾಂತಿಕಾರ್ಯದಲ್ಲಿ ತೊಡಗಿಸಿಕೊಂಡ ಅವರು ಚಿತ್ತಗಾಂಗ್ ಜಿಲ್ಲೆಯಾದ್ಯಂತ ಕ್ರಾಂತಿ ಚಟುವಟಿಕೆ ಪಸರಿಸುವಲ್ಲಿ ಹಾಗೂ ಕ್ರಾಂತಿಕಾರಿಗಳ ಬಹುದೊಡ್ಡ ಯುವಪಡೆಯನ್ನು ಕಟ್ಟುವಲ್ಲಿ ಅವಿರತವಾಗಿ ದುಡಿದರು.
22 March 1894-12 January 1934
1930ರ ಹೊತ್ತಿಗೆ ಅವರ ಕ್ರಾಂತಿಪಡೆಯಲ್ಲಿ ದೇಶಕ್ಕಾಗಿ ಜೀವ ನೀಡಲಿಕ್ಕೆ ಸಿದ್ಧರಾದ 75ಕ್ಕೂ ಹೆಚ್ಚು ತರುಣ ತರುಣಿಯರಿದ್ದರು. ಸೇನ್ ತಂಡದ ಗಣೇಶ್ ಘೋಷ್ ,ಅನಂತ ಸಿಂಹ, ನಿರ್ಮಲ್ ಸೇನ್, ಲೋಕನಾಥ ಬಲ್, ಅಂಬಿಕಾ ಚಕ್ರವರ್ತಿ, ಪ್ರೀತಿಲತಾ ವಡ್ಡೆದಾರ್, ಕಲ್ಪನಾ ದತ್ತ ಒಬ್ಬೊಬ್ಬರೂ ಕ್ರಾಂತಿಸಿಂಹಗಳೇ . ಸೂರ್ಯ ಸೇನ್ ಮತ್ತವರ ಕ್ರಾಂತಿ ಸೇನೆ ಗೆರಿಲ್ಲಾ ಯುದ್ಧದಲ್ಲಿ ಪರಿಣತವಾಗಿತ್ತು. ಬ್ರಿಟಿಷರನ್ನು ಬಗ್ಗುಬಡಿಯಲು ಅವರಿಗೆ ಅನುಕೂಲಕರವಾಗಿರುವ ಸಂಪರ್ಕ ಸಾಧನಗಳನ್ನೆಲ್ಲಾ ಕಡಿದುಹಾಕಬೇಕು ಎಂಬುದು ಅವರ ಮೊದಲ ಯೋಜನೆಯಾಗಿತ್ತು. ಆ ಹೊತ್ತಿಗಾಗಲೇ ಭಗತ್ ಸಿಂಗ್ ಸುಖದೇವ್ ರಾಜಗುರು ಅವರ ಬಲಿದಾನ ದೇಶದ ಕ್ರಾಂತಿಕಾರಿಗಳಿಗೆ ಹೊಸ ಸ್ಪೂರ್ತಿ ನೀಡಿತ್ತು, ದೇಶವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸುವ ಕನಸನ್ನು ಉದ್ದೀಪನಗೊಳಿಸಿತ್ತು.
ಸೂರ್ಯ ಸೇನ್ ಅವರ ಕ್ರಾಂತಿಪಡೆ ಬ್ರಿಟಿಷರ ಮುಖ್ಯ ಆಯುಧ ಖಜಾನೆ ಯಾಗಿದ್ದ ಚಿತ್ತಗಾಂಗ್ ಶಸ್ತ್ರಾಗಾರವನ್ನು ಲೂಟಿ ಮಾಡುವ ಸಾಹಸಕ್ಕೆ ಕೈಹಾಕಿತು. ಅಂದು ಏಪ್ರಿಲ್ 18, 1930. ಚಿತ್ತಗಾಂಗ್ ಶಸ್ತ್ರಾಗಾರಕ್ಕೆ ಮುತ್ತಿಗೆ ಹಾಕಿದ ಕ್ರಾಂತಿಕಾರಿಗಳು ಅದನ್ನು ತಮ ವಶಕ್ಕೆ ತೆಗೆದುಕೊಂಡರು. ಅಷ್ಟೇ ಅಲ್ಲ ರೈಲ್ವೆ, ಟೆಲಿಗ್ರಾಫ್, ಟೆಲಿಫೋನ್ ನೆಲೆಗಳ ಮೇಲೆ ದಾಳಿಮಾಡಿ ಅವನ್ನು ನಿಷ್ಕ್ರಿಯಗೊಳಿಸಿ ಜಗತ್ತಿನ ಸಂಪರ್ಕವನ್ನೇ ತಪ್ಪಿಸಿದರು. ಸೂರ್ಯಸೇನರ ನೇತೃತ್ವದಲ್ಲಿ ಶಸ್ತ್ರಾಗಾರದ ಮುಂದೆ ಕ್ರಾಂತಿಕಾರಿಗಳೆಲ್ಲರೂ ಸೇರಿ ಅಲ್ಲೇ ಭಾರತದ ರಾಷ್ಟ್ರಧ್ವಜ ಹಾರಿಸಿ ಚಿತ್ತಗಾಂಗ್ ಸ್ವತಂತ್ರ ಎಂದು ಘೋಷಿಸಲಾಯಿತು. ಇನ್ನೂ ಮೀಸೆ ಸರಿಯಾಗ ಮೂಡದ ತರುಣರ ಪಡೆ ಬ್ರಿಟಿಷ್ ಶಸ್ತ್ರಾಗಾರವನ್ನೇ ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಬ್ರಿಟಿಷರಿಗೆ ದೊಡ್ಡ ಮುಖಭಂಗವಾಯಿತು ಹಾಗೂ ಈ ಸುದ್ದಿ ಲಂಡನ್ನಿನವರೆಗೆ ಸದ್ದು ಮಾಡಿತು. ನಂತರ ಜಲಾಲಾಬಾದ್ ಬೆಟ್ಟಗಳಲ್ಲಿ ನಡೆದ ಬ್ರಿಟಿಷರ ಎದುರಿನ ಹೋರಾಟಗಳಲ್ಲಿ ಅನೇಕ ಕ್ರಾಂತಿಕಾರಿಗಳು ಪ್ರಾಣಾರ್ಪಣೆ ಮಾಡಿದರು. ಸೇನ್ ತಂಡದ ಪ್ರೀತಿಲತಾ ವಡ್ಡೆದಾರ್ ಯೂರೋಪಿಯನ್ ಕ್ಲಬ್ ಗೆ ದಾಳಿ ಮಾಡಿ ಮೃತ್ಯವಶಳಾದಳು. 
ಸೂರ್ಯ ಸೇನ್ ಮಾರುವೇಷಗಳಲ್ಲಿ ಅಲೆದಾಡುತ್ತಾ ಕ್ರಾಂತಿ ಚಟುವಟಿಕೆ ಮುಂದುವರೆಸಿದ್ದರು. ಅವರಿಗಾಗಿ ಭಾರಿ ಹುಡುಕಾಟ ನಡೆದಿತ್ತು. ಬ್ರಿಟಿಷರು ನೀಡಿದ ದುಡ್ಡಿನ ಆಸೆಗೆ ಬಿದ್ದ ನೇತ್ರ ಸೇನ್ ಮಾಸ್ಟರ್ ದಾ ಅವರ ಸುಳಿವು ನೀಡಿ ಬಂಧನಕ್ಕೆ ಕಾರಣವಾದ. ಅವರನ್ನು ಗಲ್ಲಿಗೇರಿಸುವ ಮುನ್ನ ಸೂರ್ಯ ಸೇನರನ್ನು ಅಮಾನುಷವಾಗಿ ಹಿಂಸಿಸಲಾಯಿತು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸೇನರ ಹಲ್ಲು ಗಳನ್ನು ಹ್ಯಾಮರ್ ನಿಂದ ಹೊಡೆದು ಉಗುರುಗಳನ್ನು ಕಿತ್ತು ಕೈಕಾಲುಗಳ ಕೀಲುಗಳನ್ನು ಮುರಿದು ಅತ್ಯಂತ ಪೈಶಾಚಿಕವಾಗಿ ಅವರನ್ನು 12 ಜನವರಿ 1934 ರಂದು ಗಲ್ಲಿಗೇರಿಸಲಾಯಿತು. ಅವರು ಸತ್ತಮೇಲೂ ಸುಮ್ಮನಾಗದ ನೀಚ ಬ್ರಿಟಿಷರು ಅವರ ಶವವನ್ನು ಸಮುದ್ರಕ್ಕೆ ಎಸೆದು ಸೇಡು ತೀರಿಕೊಂಡಿತು. ಸಾವಿಗೂ ಮುಂಚೆ, ಸೂರ್ಯ ಸೇನ್ ತನ್ನ ತಂಡದ ಯುವಕರಿಗೆ ಪತ್ರವೊಂದನ್ನು ಬರೆದಿದ್ದ.
'ಸಾವು ಬಾಗಿಲು ಬಡಿಯುತ್ತಿದೆ. ನನ್ನ ಮನಸ್ಸು ಅನಂತದೆಡೆ ಹಾರುತ್ತಿದೆ. ಸಾವನ್ನು ಆಪ್ತ ಸ್ನೇಹಿತನಂತೆ ಖುಷಿಯಿಂದ ಅಪ್ಪಿಕೊಳ್ಳುವ ಪವಿತ್ರ ಗಳಿಗೆ ಇದು. ನಿಮಗಾಗಿ ಏನನ್ನು ಬಿಟ್ಟುಹೋಗುತ್ತಿದ್ದೇನೆ ಗೆಳೆಯರೆ? ಒಂದು ಬಂಗಾರದಂಥ ಕನಸನ್ನು ಮಾತ್ರ. ಭಾರತದ ಸ್ವಾತಂತ್ರ್ಯದ ಕನಸು. ಗುಲಾಮಿ ದಿನಗಳು ಕಳೆಯುತ್ತ ಬಂದಿವೆ. ಸ್ವಾತಂತ್ರ್ಯದ ಮಿಂಚು ಅದೋ ಅಲ್ಲಿ ಕಾಣುತ್ತಿದೆ. ಹಿಂದಡಿಯಿಡದೆ ಮುನ್ನುಗ್ಗಿ. ಯಶಸ್ಸು ನಿಮ್ಮದೇ'.
ಸೂರ್ಯ ಸೇನ್ನ ಈ ಪತ್ರ ಆತನ ಸಹವರ್ತಿಗಳನ್ನು ತಲುಪುವಷ್ಟರಲ್ಲಿ ಆತ ಸಾವಿನ ತೆಕ್ಕೆಯಲ್ಲಿದ್ದ. ಬ್ರಿಟಿಷರು ಸೂರ್ಯ ಸೇನ್ ಎಂಬ ಕ್ರಾಂತಿಕಾರಿಯನ್ನು ಬರ್ಬರವಾದ ಹಿಂಸೆಗೆ ಒಳಪಡಿಸಿ ಸಾಯಿಸಿದ್ದರು. ಈ ದೇಶದ ಪರಂಪರೆಯಲ್ಲಿ ಇಂತಹ ಅದೆಷ್ಟೋ ನಿಸ್ವಾರ್ಥ, ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದವರು ಬಂದು ಹೋಗಿದ್ದಾರೆ. ಆ ಪರಂಪರೆಗೆ ನಮಿಸೋಣ. ಅವರಿಗೆ ಭಾವಪೂರ್ಣ, ಶ್ರದ್ಧೆಯ ನಮನಗಳನ್ನು ಅರ್ಪಿಸೋಣ.
JAI HIND
ಲೇಖನ : ಮಹೇಶ್ ಹಿರೇಮಠ
loading...

Post a Comment

Powered by Blogger.