Veerakesari 07:04
loading...
ತುಮಕೂರು ಡಾಬಸ್‌ಪೇಟೆಯಿಂದ 6 ಕಿ.ಮೀ ದೂರದಲ್ಲಿದೆ ದಕ್ಷಿಣ ಕಾಶಿ ಎಂದು ಹೆಸರಾದ ‘ಶಿವಗಂಗೆ’. ಶಿವಗಂಗೆಗೆ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಇದೆ. ಶಿವಗಂಗೆಯಲ್ಲೇನು ವಿಶೇಷ ಎನ್ನುತ್ತೀರಾ..
ಶಿವಗಂಗೆ ಕಡಿದಾದ ಬೆಟ್ಟದ ಮೇಲಿರುವ ಕಾರಣ ಇದು ಚಾರಣ ಪ್ರಿಯರಿಗೆ ಅತ್ಯುತ್ತಮ ಗಿರಿಶಿಖರ. ಬೆಟ್ಟದ ತುದಿಯ ನಂದಿಯನ್ನು ನೋಡಿದಾಗ ಖುಷಿಯಾಗುತ್ತದೆ. ಆದರೆ ಇಡುಕಿರಿದ ಸ್ಥಳದಲ್ಲೇ ಅದಕ್ಕೆ ಸುತ್ತುಹಾಕುವಾಗ ಜೀವ ಬಾಯಿಗೆ ಬಂದಂತಾಗುತ್ತದೆ. ಕಡಿದಾದ ಬೆಟ್ಟ ಏರಿ, ಬೃಹತ್‌ ನಂದಿಯನ್ನು ಪ್ರದಕ್ಷಿಣೆ ಹಾಕುವುದೇ ಸಾಹಸ. ನಂದಿಯ ಕೆಳಭಾಗದಲ್ಲಿ ದೊಡ್ಡ ಪ್ರಪಾತವಿದೆ. ಒಂದಿಷ್ಟು ಮೆಟ್ಟಿಲುಗಳನ್ನು ಏರಿದರೆ ಸಾಕು ಗಂಗಾಧರೇಶ್ವರ ದೇವಾಲಯ ಸಿಗುತ್ತದೆ. ಇಲ್ಲಿನ ಬೆಳ್ಳಿಗಂಟೆಗಳು ಭಕ್ತಿಯ ಪರಾಕಾಷ್ಠೆಯ ಸಂಕೇತಗಳು.
ಈ ಪವಿತ್ರ ಪುಣ್ಯ ಸ್ಥಳದಲ್ಲಿ ಇರುವ ಈಶ್ವರ ಲಿಂಗಕ್ಕೆ ತುಪ್ಪವನ್ನು ಹಚ್ಚಿದರೆ ಅದು ಬೆಣ್ಣೆಯಾಗಿ ಪರಿವರ್ತನೆಯಾಗುತ್ತದೆ. ಬೇಸಿಗೆಯಲ್ಲಿ ಬಹುತೇಕ ಕಲ್ಯಾಣಿಗಳು, ನೀರಿನ ಸೆಲೆ ಒಣಗಿದರೆ, ಇಲ್ಲಿ ತುಂಬಿ ತುಳುಕುತ್ತಿರುತ್ತದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಶಿವಗಂಗೆಯಲ್ಲಿರುವ ಗಂಗಾಧರೇಶ್ವರ ದೇಗುಲವನ್ನು ಅಗಸ್ತ್ಯರು ಪ್ರತಿಷ್ಠಾಪಿಸಿದರು ಎನ್ನುವ ಐತಿಹ್ಯವಿದೆ. ಒಂದೊಂದು ದಿಕ್ಕಿನಿಂದ ಒಂದೊಂದು ಆಕಾರದಲ್ಲಿ ಗೋಚರಿಸುವ ಶಿವಗಂಗೆಯ ಬೆಟ್ಟ, ಸಕಲ ಚರಾಚರಗಳಲ್ಲಿಯೂ ಸೃಷ್ಠಿಕರ್ತನ ಸಾನ್ನಿಧ್ಯವಿದೆ ಎಂಬ ಭಗವದ್ಗೀತೆಯನ್ನು ನೆನಪಿಸುವುದು ಶಿವಗಂಗೆಯ ಮತ್ತೊಂದು ವೈಶಿಷ್ಟ್ಯ.
ಶಿವಗಂಗೆ ಬೆಟ್ಟವನ್ನು ಉತ್ತರದಿಂದ ನೋಡಿದರೆ ಸರ್ಪದಂತೆಯೂ, ದಕ್ಷಿಣದಿಂದ ಗಣೇಶನಂತೆಯೂ, ಪೂರ್ವದಿಂದ ನಂದಿಯಂತೆಯೂ, ಪಶ್ಚಿಮದಿಂದ ಲಿಂಗದಂತೆಯೂ ಕಾಣುತ್ತದೆ. ಈ ಬೆಟ್ಟದ ಮೇಲೆ ಅಷ್ಟಲಿಂಗ, ಅಷ್ಟಗಣಪ, ಅಷ್ಟ ವೃಷಭ, ಅಷ್ಟತೀರ್ಥಗಳಿವೆ. ಗಣಪನ ದೇವಾಲಯವೂ ಇದೆ.
ಶಿವಗಂಗೆಯ ಪ್ರಸ್ತಾಪ ಪುರಾಣ ಹಾಗೂ ಗುರುಚರಿತ್ರೆಯಲ್ಲೂ ಬರುತ್ತದೆ. ಹೊಯ್ಸಳರ ಕಾಲದ ವಿಷ್ಣುವರ್ಧನ ನಂತರ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಗುಡಿ ಗೋಪರ ನಿರ್ಮಿಸಿದ್ದಾರೆ. ಇಲ್ಲಿ ಸ್ವರ್ಣಾಂಭ ಸಹಿತ ಗಂಗಾಧರೇಶ್ವರ, ಶಾಂತೇಶ್ವರ, ಓಂಕಾರೇಶ್ವರ, ರೇವಣ ಸಿದ್ಧೇಶ್ವರ, ಕುಂಭೇಶ್ವರ, ಸೋಮೇಶ್ವರ, ಮುದ್ದು ವೀರೇಶ್ವರನೆಂಬ ಅಷ್ಟ ಲಿಂಗಗಳಿದ್ದರೆ, ಅಗಸ್ತ್ಯತೀರ್ಥ, ಶಂಕರತೀರ್ಥ, ಕಣ್ವತೀರ್ಥ, ಕದಂಬತೀರ್ಥ, ಮೈತ್ಲಾ ತೀರ್ಥ, ಪಾತಾಳಗಂಗೆ, ಒಳಕಲ್ ತೀರ್ಥ, ಕಪಿಲತೀರ್ಥ ಎಂಬ ಅಷ್ಟ ತೀರ್ಥಗಳಿವೆ.
ಅಗಸ್ತ್ಯ ಋಷಿಗಳು ಇಲ್ಲಿ ತಪಸ್ಸು ಮಾಡಿದ ಸ್ಥಳ ಎನ್ನಲಾದ ಅಗಸ್ತ್ಯ ತೀರ್ಥದ ಸುತ್ತ ನೂರೆಂಟು ಶಿವಲಿಂಗಗಳಿವೆ. ಸಮೀಪದಲ್ಲಿ ಕಮಲ ತೀರ್ಥ, ಉತ್ತರಕ್ಕೆ ಶೃಂಗೇರಿ ಶಾರದಾ ಪೀಠ ಮತ್ತು ವಹ್ನಿ ಕುಲದ ಮಹಾಲಕ್ಷ್ಮೀ ಪೀಠವಿದೆ. ಪೂರ್ವಕ್ಕೆ ಬೃಹದಾಕಾರದ ರಾಚೋಟಿ ವೀರಭದ್ರಾಲಯದ ಎತ್ತರದ ಗಂಟೆ ಕಂಬ, ಹರಕೆ ಗಣಪ, ಪಾತಾಳಗಂಗೆಗೆ ಹೋಗುವ ಮಾರ್ಗದಲ್ಲಿ ಕ್ಷೇತ್ರದ ಅಧಿ ದೇವತೆ ಹೊನ್ನಾದೇವಿ ದೇವಸ್ಥಾನವಿದೆ. ಇಲ್ಲಿನ ಹೊನ್ನಾದೇವಿ ದೇವಾಲಯ ಪುರಾತನವಾದದ್ದು. ಹೊಯ್ಸಳರ ರಾಣಿ ಶಾಂತಲೆಯು ಹೊನ್ನಾದೇವಿ ಭಕ್ತೆ. ಶಾಂತಲೆ ಆತ್ಮಹತ್ಯೆ ಮಾಡಿಕೊಂಡಿದ್ದುಈ ಬೆಟ್ಟದಲ್ಲಿಯೇ ಎಂಬ ಐತಿಹ್ಯ.
ಇಷ್ಟಾರ್ಥ ಪೂರೈಸುವ ಗಂಗೆ
ನೀರ ಚಿಲುಮೆ ಹಾಗೂ ಶಿವನ ಗುಡಿ ಸೇರಿ ಈ ಪ್ರದೇಶಕ್ಕೆ ‘ಶಿವಗಂಗೆ’ ಎಂದು ಹೆಸರಾಗಿದೆ. ಇದಕ್ಕೆ ಒರಳಕಲ್ಲು ತೀರ್ಥ ಎಂದು ಕರೆಯಲಾಗುತ್ತದೆ. ಒರಳಿನಾಕಾರದಲ್ಲಿರುವ ಇಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಹೇಳಿಕೊಂಡು ಕೈ ಇಡುತ್ತಾರೆ. ಗಂಗೆ ಸಿಕ್ಕರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ನಂಬಿಕೆ. ಒರಳಕಲ್ಲು ತೀರ್ಥದಲ್ಲಿ ವರ್ಷವಿಡೀ ನೀರು ದೊರೆಯುತ್ತದೆ.
ಗಂಗಾಧರೇಶ್ವರನ ಕೃಪೆ ಸರ್ವರಿಗೂ ಸನ್ಮಂಗಳವನ್ನು ಉಂಟು ಮಾಡಲಿ..
loading...

Post a Comment

Powered by Blogger.